ಸುವರ್ಣ ಬಳ್ಳಾರಿ ನನ್ನ ಕನಸಿನ‌ ಯೋಜನೆ -ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ಫೆ.9: ನಗರದಲ್ಲಿ ಅಭಿವೃದ್ಧಿ ಪರ್ವ ಅರಂಭವಾಗಿದೆ, ಬಳ್ಳಾರಿಯನ್ನು ಸುವರ್ಣ ಬಳ್ಳಾರಿ ಮಾಡುವುದು ನನ್ನ ಕನಸಿನ ಯೋಜನೆಯಾಗಿದೆ, ಇದೆ ಇದರ ಮೊದಲ ಭಾಗವಾಗಿ ದುರ್ಗಮ್ಮ ದೇವಸ್ಥಾನ ಬಳಿಯ ಅಂಡರ್ ಪಾಸ್ ರಸ್ತೆ ಉದ್ಘಾಟನೆಯಾಗಿರುವುದೇ ಸಾಕ್ಷಿ ಎಂದು ಶಾಸಕ ಭರತ್ ರೆಡ್ಡಿ ಹೇಳಿದರು.
ಭಾನುವಾರ ಸಂಜೆ ಅಂದಾಜು 2.20 ಕೋಟಿ ವೆಚ್ಚದಲ್ಲಿ ಬಳ್ಳಾರಿ ದುರ್ಗಮ್ಮ ದೇವಸ್ಥಾನದ ಅಂಡರ್ ಪಾಸ್ ರಸ್ತೆ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ನಗರದಲ್ಲಿ ಒಂದೊಂದೇ ರಸ್ತೆ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಬಳ್ಳಾರಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಸಿದ್ಧವಾಗಿದೆ. ಮೋಕಾ ರಸ್ತೆ ಅಭಿವೃದ್ಧಿಗಾಗಿ ಏಳು ಕೋಟಿ ಮೀಸಲಿಡಲಾಗಿದೆ. ಗಡಿಗಿ ಚೆನ್ನಪ್ಪ ವೃತ್ತದಿಂದ ಅಂಡರ್ ಪಾಸ್ ವರೆಗೆ ರಸ್ತೆ ಅಭಿವೃದ್ಧಿ ಮಾಡಲಾಗುವುದು ಮತ್ತು ಅನಂತಪುರ ರಸ್ತೆ ಈಗಾಗಲೇ ಅಭಿವೃದ್ಧಿ ಮಾಡಲಾಗಿದೆ ಎಂದರು.
ಬಳ್ಳಾರಿಯ ಪ್ರತಿ ರಸ್ತೆ ದೊಡ್ಡ ಮಟ್ಟದಲ್ಲಿ ಅಗಲೀಕರಣ ಮಾಡಿ ಅಭಿವೃದ್ಧಿ ಮಾಡುತ್ತೇವೆ. ಕ್ಷೇತ್ರಕ್ಕೆ ಬೇಕಾದ ಅನುದಾನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ನೀಡಿದ್ದಾರೆ, ಹೀಗಾಗಿ ಬಳ್ಳಾರಿಯನ್ನು ಸುವರ್ಣ ಬಳ್ಳಾರಿ ಮಾಡುತ್ತೇನೆ ಎಂದು ಅವರು‌ ಹೇಳಿದರು.
ಕೆ ಎಂ ಸರ್ ಸಿ, ಕೆ ಅರ್ ಡಿಬಿ, ಡಿಎಂಎಫ್ ಸೇರಿದಂತೆ ಹಲವು ಕಡೆಯಿಂದ ಬರುವ ಅನುದಾನ ಬಳಸಿ ಬಳ್ಳಾರಿ ಅಭಿವೃದ್ಧಿ ಮಾಡಲಾಗುತ್ತಿದೆ. ತುಂಗಭದ್ರಾ ಜಲಾಶಯದಿಂದ ಬಳ್ಳಾರಿ ನಗರಕ್ಕೆ ನೇರ ನೀರು ತರುವ 1200 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದರ ಭಾಗಬಾಗಿ ಇದೀಗ ಬಳ್ಳಾರಿ ನಗರಕ್ಕೆ ಪ್ರತ್ಯೇಕ 24x 7 ಕುಡಿಯುವ ನೀರಿಗಾಗಿ 260 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಕುಡಿಯುವ ನೀರಿನ ಯೋಜ‌ನೆ ಪೂರ್ಣಗೊಳ್ಳಲಿದೆ ಎಂದರು.
ಗಡಿಗಿ ಚನ್ನಪ್ಪ ವೃತ್ತದ ಕಾಮಗಾರಿ ಮುಗಿದಿದೆ, ಸಣ್ಣಪುಟ್ಟ ಕೆಲಸ ಬಾಕಿ ಇದ್ದು, ಸಿಎಂ ಸಿದ್ದರಾಮಯ್ಯ ಅವರು ಸಮಯ ನೀಡಿದ ಬಳಿಕ ಕ್ಲಾಕ್ ಟವರ್ ಅನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.


ರಾಜ್ಯಸಭಾ ಸದಸ್ಯ ದಾ.ಸಯ್ಯದ್ ನಾಸೀರ್ ಹುಸೇನ್ ಮಾತನಾಡಿ, ದುರ್ಗಮ್ಮ ದೇಗುಲದ ಅಂಡರ್ ಪಾಸ್ ರಸ್ತೆ ಮಳೆ ನೀರು ನಿಂತು ತುಂಬಾ ಹಾಳಾಗಿ ಹೋಗಿತ್ತು. ಹೀಗಾಗಿ ಎರಡು ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ. ಗಡಿಗಿ ಚೆನ್ನಪ್ಪ ವೃತ್ತದ ಕ್ಲಾಕ್ ಟವರ್ ಅನ್ನು 7 ಕೋಟಿ ರು. ಖರ್ಚು ಮಾಡಿ ನಿರ್ಮಾಣ ಮಾಡಲಾಗುತ್ತಿದೆ. ಕೆಕೆಅರ್.ಡಿಬಿ, ಡಿಎಂಎಫ್ ಸೇರಿದಂತೆ ಸಾಕಷ್ಟು ಹಣ ಬಳ್ಳಾರಿ ಅಭಿವೃದ್ಧಿಗೆ ನೀಡಲಾಗಿದೆ ಶಾಸಕ ಭರತ್ ರೆಡ್ಡಿ ಅವರ ಮುತುವರ್ಜಿಯಿಂದ ಬಳ್ಳಾರಿ ಅಭಿವೃದ್ಧಿಯಾಗಲಿದೆ ಎಂದರು.
ವಿಳಂಬವಾಗಿರುವ ಬಳ್ಳಾರಿ ಹೊಸಪೇಟೆ ರಸ್ತೆ ಶೀಘ್ರದಲ್ಲಿ ಮುಗಿಯಲಿದೆ. ಬಳ್ಳಾರಿಗೆ ನಿಮಾನ್ಸ್ ಆಸ್ಪತ್ರೆಯ ಶಾಖೆಯನ್ನು ತರುತ್ತೇವೆ. ಜೀನ್ಸ್ ಪಾರ್ಕ್ ಮಾಡಲು 125 ಎಕರೆ ಸ್ಥಳ ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಟ್ಟೂರು ಸಂಸ್ಥಾನ ಮಠದ ಕೊಟ್ಟೂರು ಸ್ವಾಮಿ,  ಎಮ್ಮಿಗನೂರು ಹಂಪಿಸಾವಿರ ಮಠದ ವಾಮದೇವ ಶಿವಾಚಾರ್ಯಸ್ವಾಮಿ, ಮೇಯರ್ ಮುಲ್ಲಂಗಿ ನಂದೀಶ್, ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯುನ್ ಖಾನ್, ಉಪಮೇಯರ್ ಡಿ.ಸುಕುಂ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಕಮ್ಮ ಮಹಾಜನ ಸಂಘದ ಅಧ್ಯಕ್ಷ ಮುಂಡ್ಲೂರು ಅನುಪಕುಮಾರ್, ರೆಡ್ಡಿ ಮಹಾಜನ ಸಂಘದ ನಾರಾ ಪ್ರತಾಪ್ ರೆಡ್ಡಿ, ಅಖಿಲ ಭಾರತ ವೀರಶೈವ ಮಹಾಸಭಾದ ದಂಡಿನ ಶಿವಾನಂದ, ಮುಖಂಡರಾದ ಎ.ಮಾನಯ್ಯ, ವೆಂಕಟೇಶ್ ಹೆಗಡೆ, ಅಯಾಜ್ ಅಹ್ಮದ್, ಅಸ್ಲಂ ಫರವೇಜ್, ಮಹಾನಗರ ಪಾಲಿಕೆಯ ಸದಸ್ಯರು, ಚಾನಾಳ್ ಶೇಖರ್, ಗುಡ್ಲೂರು ರವಿ, ಚಂಪಾ ಚವ್ಹಾಣ್, ರಾಮು ಚವ್ಹಾಣ್, ಶಮೀಮ್ ಜೊಹ್ರಾ, ಸಲ್ಮಾ ಎಸ್.ಕೆ,  ಅಖಿಲಾ ಇತರರು ಉಪಸ್ಥಿತರಿದ್ದರು.