ರಾಜ್ಯ ಸರಕಾರ ನಾಡೋಜ‌ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಬೇಕು -ಸಾಹಿತಿ ಡಾ.‌ವಸುಂಧರ‌ ಭೂಪತಿ

ಬಳ್ಳಾರಿ, ಏ.28: ತೊಗಲು ಗೊಂಬೆ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ಕರ್ನಾಟಕ ಸರಕಾರ ಪ್ರಶಸ್ತಿ ಆರಂಭಿಸಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ, ಸಾಹಿತಿ ಡಾ.‌ವಸುಂಧರಾ ಭೂಪತಿ ಅವರು ಒತ್ತಾಯಿಸಿದರು.
ನಗರದ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಭಾನುವಾರ ಸಂಜೆ ಡಾ.‌ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ನಾಡೋಜ ಬೆಳಗಲ್ಲು ವೀರಣ್ಣ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು‌ ಮಾತನಾಡಿದರು.
ಅಳಿವಿನಂಚಿನಲ್ಲಿರುವ ತೊಗಲುಗೊಂಬೆಯಾಟಕ್ಕೆ ಆಧುನಿಕ ಸ್ಪರ್ಶ ನೀಡಿ ದೇಶ ವಿದೇಶಗಳಲ್ಲಿ ತಮ್ಮ‌ಮೇಳದ ಮೂಲಕ ಪ್ರದರ್ಶಿಸಿದ ನಾಡೋಜ ಬೆಳಗಲ್ಲು ವೀರಣ್ಣ ಅವರ ಜೀವನ, ಜಾನಪದ ಮತ್ತು ರಂಗಭೂಮಿಗೆ ನೀಡಿರುವ ಕೊಡುಗೆಯನ್ನು‌ ಪಠ್ಯದಲ್ಲಿ ಅಳವಡಿಸಿ‌ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.
ಐದು ದಶಕಗಳ‌ಕಾಲ ವಾಸವಿದ್ದ ನಿವಾಸದ ಸಮೀಪದ ರೇಡಿಯೋ ಪಾರ್ಕ್ ರಸ್ತೆಗೆ ನಾಡೋಜ ಬೆಳಗಲ್ಲು ವೀರಣ್ಣ ಹೆಸರಿಡಬೇಕು ಎಂದು ಮಹಾನಗರ ಪಾಲಿಕೆಗೆ ಮನವಿ ಮಾಡಿದರು.


ನಾಡೋಜ ಬೆಳಗಲ್ಲು ವೀರಣ್ಣ ಮತ್ತು ಸಂಡೂರಿನ‌ ನಾಡೋಜ ಡಾ. ವಿ.ಟಿ. ಕಾಳೆ ಅಖಂಡ ಬಳ್ಳಾರಿ ಜಿಲ್ಲೆಯ ಕಲಾ ಕ್ಷೇತ್ರದ ದಿಗ್ಗಜರು ಎಂದು ಶ್ಲಾಘಿಸಿದ ಡಾ. ವಸುಂಧರ ಅವರು ಇಬ್ಬರೂ ಬಸವ ಪ್ರಜ್ಞೆ, ಅಂಬೇಡ್ಕರ್ ಸಮಾನತೆಯನ್ನು ‌ಅಳವಡಿಸಿಕೊಂಡು ತಮ್ಮ ಕ್ಷೇತ್ರಗಳನ್ನು ಶ್ರೀಮಂತ ಗೊಳಿಸಿದವರು ಎಂದು ಕೊಂಡಾಡಿದರು.
ಬಸವ ಜಯಂತಿ ಸಂದರ್ಭದಲ್ಲಿ ನಾಡೋಜ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಹೆಸರಾಂತ ಚಿತ್ರ ಕಲಾವಿದ ಡಾ. ವಿ.ಟಿ. ಕಾಳೆ ಅವರಿಗೆ ಲಭಿಸುತ್ತಿರುವುದು ಜಿಲ್ಲೆಯ‌‌‌‌‌ ಸಾಂಸ್ಕೃತಿಕ ಲೋಕಕ್ಕೆ ಹರುಷ, ಹೆಮ್ಮೆ ತಂದಿದೆ ಎಂದರು.
ಸೌಜನ್ಯ ವಿನಯ ಪ್ರತಿಭೆಯ ಸಂಗಮವಾದ ಬೆಳಗಲ್ಲು ವೀರಣ್ಣ ಅವರು ಬಳ್ಳಾರಿಯ ಡಾ. ರಾಜಕುಮಾರ್ ಎಂದು ಹೇಳಿದರು.
ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ.‌ಸುಜಾತ ಜಂಗಮಶೆಟ್ಟಿ ಅವರು ಮಾತನಾಡಿ ಅಖಂಡ‌ ಬಳ್ಳಾರಿ ಜಿಲ್ಲೆ ರಂಗಭೂಮಿಯ ತವರೂರು. ಇಲ್ಲಿ‌ಕಾಣುವಷ್ಟು ನಾಟಕ ಪ್ರದರ್ಶನ, ರಂಗ ಕಲಾವಿದರು ಬೇರೆಲ್ಲೂ ಕಾಣಸಿಗುವುದಿಲ್ಲ ಎಂದು ಹರ್ಷಿಸಿದರು.
ನಾಡೋಜ ಬೆಳಗಲ್ಲು ‌ವೀರಣ್ಣ ಅವರು ಬದುಕಿದ್ದರೆ 2030ಕ್ಕೆ ಶತಾಯುಷಿಗಳಾಗುತ್ತಿದ್ದರು. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ವೀರಣ್ಣ ಅವರ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾಡಿನ ವಿಶ್ವ ವಿದ್ಯಾಲಯದ ಸಂಶೋಧನಾ ‌ವಿದ್ಯಾರ್ಥಿಗಳು ಬೆಳಗಲ್ಲು ‌ವೀರಣ್ಣ ಅವರ ಕುರಿತು ಮಹಾ ಪ್ರಬಂಧ (ಪಿ.ಎಚ್‌ಡಿಗಾಗಿ)ಗಳನ್ನು‌ ರಚಿಸಬೇಕು ಎಂದರು.
ರಂಗ ಕರ್ಮಿ, ಚಿತ್ರನಟ ಮೈಸೂರು ರಮಾನಂದ ಅವರು ಮಾತನಾಡಿ, ರಂಗಭೂಮಿ ‌ಮತ್ತು ಜಾನಪದ ಕ್ಷೇತ್ರಕ್ಕೆ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಮರಣೋತ್ತರವಾಗಿ ಬೆಳಗಲ್ಲು ವೀರಣ್ಣ ಅವರಿಗೆ ಪದ್ಮಶ್ರೀ ಪ್ರಶಸ್ತಿ ‌ನೀಡಬೇಕು ಎಂದು ಒತ್ತಾಯಿಸಿದರು.
ವೀರಣ್ಣ ಅವರೊಂದಿಗಿನ ದಶಕಗಳ ಒಡನಾಟ ಸ್ಮರಿಸಿ ಭಾವುಕರಾದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.‌ವಿ.ಟಿ. ಕಾಳೆ ಅವರು ಅಪ್ರತಿಮ ರಂಗ,ಜಾನಪದ ಕಲಾವಿದರಾಗಿದ್ದ ನಾಡೋಜ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಅತ್ಯಂತ ಸಂತೋಷವಾಗಿದೆ ಎಂದು ತಿಳಿಸಿದರು.
ತೊಗಲುಗೊಂಬೆ ಚಿತ್ರಗಳನ್ನು ಹೇಗೆ ರಚಿಸಬೇಕು ಎಂದು ಕಲಿಸಿದ್ದು ವೀರಣ್ಣ ಅವರು. ಸೌಮ್ಯ, ಸರಳ‌ ಸಜ್ಜನಿಕೆಯ ವೀರಣ್ಣ ಬೌತಿಕವಾಗಿಯಷ್ಟೇ ನಮ್ಮನ್ನು ಅಗಲಿದ್ದಾರೆ. ಅವರ ಕಲಾ ಚೇತನ ಎಂದೆಂದೂ‌ ಅಮರ ಎಂದು ಗುಣಗಾನ ಮಾಡಿದರು.
ಕಮ್ಮರಚೇಡು ಸಂಸ್ಥಾನ‌ಮಠದ ಶ್ರೀ ಕಲ್ಯಾಣ ಸ್ವಾಮಿಗಳು ಆಶೀರ್ವಚನ ನೀಡಿದರು.
ಹಿರಿಯ ರಂಗ ಕಲಾವಿದ ಗಾದಿಗನೂರು ಹಾಲಪ್ಪ ಮಾತನಾಡಿದರು.
ಹಿರಿಯ ಸಾಹಿತಿ ಟಿ.ಕೆ ಗಂಗಾಧರ ಪತ್ತಾರ್ ಮತ್ತು ರಂಗ ಕಲಾವಿದ ಎಎಂ‌ಪಿ ವೀರೇಶ ಸ್ವಾಮಿ ಅವರು ವೀರಣ್ಣ ಅವರ ವ್ಯಕ್ತಿತ್ವ ಪರಿಚಯಿಸುವ ಕವಿತೆಗಳನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ಉದ್ಯಮಿ ಎಂ. ಜಿ. ಗೌಡ, ರಂಗತೋರಣದ ಪ್ರಭುದೇವ ಕಪ್ಪ ಗಲ್ಲು, ರಂಗ ಸಂಘಟಕ ಮೈಸೂರಿನ ಬಿ.ಎಂ. ರಾಮಚಂದ್ರ, ಕಸಾಪ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ‌ನಿರ್ದೇಶಕ ಟಿ. ಕೊಟ್ರಪ್ಪ, ಬಳ್ಳಾರಿ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ್, ರಂಗ ಕಲಾವಿದ ಪುರುಷೋತ್ತಮ‌ ಹಂದ್ಯಾಳ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ವೀರಣ್ಣ ಅವರ ಧ್ವನಿ ಯಲ್ಲಿರುವ ಬಾಪೂಜಿ ತೊಗಲುಗೊಂಬೆಯಾಟ ಪ್ರದರ್ಶನ ನೆರೆದಿದ್ದ ಸಭಿಕರ ಮೆಚ್ಚುಗೆ ಪಡೆಯಿತು.
ಟ್ರಸ್ಟ್‌ ನ ಗಗನ್‌ಕುಮಾರ್ ಸ್ವಾಗತಿಸಿದರು. ಮೇಳದ ಟ್ರಸ್ಟಿ ಬೆಳಗಲ್ಲು ಹನುಮಂತು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕಿ‌ವೀಣಾ ನಿರೂಪಿಸಿದರು. ರಂಗ ಕಲಾವಿದ ಡಾ. ಗಂಗಾಧರ ದುರ್ಗಂ, ಲಕ್ಷ್ಮಿ ಬೆಳಗಲ್ಲು, ರೇಖಾ ಬೆಳಗಲ್ಲು‌ ನಿರ್ವಹಿಸಿದರು.

ಮೆರವಣಿಗೆ: ಮೋತಿ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ,
ಬೆಳಗಲ್ಲು ವೀರಣ್ಣ ಅವರ ಭಾವಚಿತ್ರ ಮತ್ತು ಕಲಾ ಧೀಮಂತ ಅಭಿನಂದನಾ ಗ್ರಂಥವನ್ನು ಪಲ್ಲಕ್ಕಿಯಲ್ಲಿ ಹೊತ್ತು ಜಾನಪದ ತಂಡಗಳ ಪ್ರದರ್ಶನ ದೊಂದಿಗೆ ಸಾಗಿದ ಮೆರವಣಿಗೆ ಗಮನ ಸೆಳೆಯಿತು.
—–