ಧಾರವಾಡ: ಶೋಷಿತ ತೃತೀಯ ಲಿಂಗಿಗಳ ಬದುಕು, ಹೋರಾಟದ ಕುರಿತಂತೆ ಕನ್ನಡದಲ್ಲಿ ಕತೆ, ಕಾದಂಬರಿ, ಆತ್ಮಕಥನಗಳು ಪ್ರಕಟವಾಗಿವೆ. ಚಲನಚಿತ್ರವೂ ಬಂದಿದೆ. ಆದರೆ ಮೊದಲ ಬಾರಿಗೆ ತೃತೀತ ಲಿಂಗಿಗಳ ಕುರಿತ ಸಂಶೋಧನಾ ಅಧ್ಯಯನ ನಡೆದು ನಾಡಿನ ವಿಶ್ವವಿದ್ಯಾಲಯವು ಈ ಮಹಾಪ್ರಬಂಧಕ್ಕೆ ಪಿಎಚ್.ಡಿ 2018ರಲ್ಲಿಯೇ ಪದವಿ ನೀಡಿ ವಿಶಿಷ್ಟತೆ ಮೆರೆದಿದೆ.
ಹೌದು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ
ಹಾವೇರಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಮ್ ಹೆಚ್ ಹೆಬ್ಬಾಳ ಅವರು ಮಂಡಿಸಿದ “ಅಂಚಿಕೃತರಲ್ಲಿಯೇ ಅಂಚಿಕೃತರಾದ ಉತ್ತರ ಕರ್ನಾಟಕದ ತೃತೀಯ ಲಿಂಗಿಗಳ ಅಧ್ಯಯನ (marginalization of the marginalized: a study of third gender in north karnataka)” ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ನೀಡಿದೆ.
ವಿವಿಯ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುಭಾಷ್ ನಾಟೀಕರ್ ಅವರು ಈ ಸಂಶೋಧನಾ ಕೃತಿಗೆ ಮಾರ್ಗದರ್ಶಕರಾಗಿದ್ದರು.
ಪಿಎಚ್.ಡಿ ಪದವಿ ಘೋಷಣೆಯಾಗಿ ಮೂರು ವರ್ಷಗಳಾಗಿದ್ದರೂ ಈ ಬಗ್ಗೆ ಹೆಚ್ಚು ಚರ್ಚೆಯಾಗಿರಲಿಲ್ಲ…ಈಚೆಗೆ ಹಾವೇರಿಯ ತೃತೀಯಲಿಂಗಿಯೂ ಆಗಿರುವ ಹೋರಾಟಗಾರ್ತಿ ಅಕ್ಷತಾ ಕೆಸಿ ಅವರು ಕಳೆದ ವರ್ಷ ಡಿಶೆಂಬರ್ ತಿಂಗಳಿನಲ್ಲಿ ಕರ್ನಾಟಕ ವಿವಿಯಲ್ಲಿ ಮಾಡಿದ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಮರು ಪ್ರಸಾರವಾದ ಬಳಿಕ ಸಂಶೋಧನಾ ಕೃತಿಯ ಕುರಿತಂತೆ ಚರ್ಚೆಗಳು ಆರಂಭವಾಗಿವೆ.
ವಿವಿಯ ವಿಶ್ರಾಂತ ಕುಲಪತಿ ಫ್ರೊ. ಪ್ರಮೋದ್ ಗಾಯಿ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ
ಡಾ. ಎಂ. ಎಚ್ ಹೆಬ್ಬಾಳ್ ಅವರ ಸಂಶೋಧನಾ ಪ್ರಬಂಧವೇ ಕರ್ನಾಟಕದಲ್ಲಿ ತೃತೀಯ ಲಿಂಗಿಗಳ ಬಗ್ಗೆ ನಡೆದಿರುವ ಮೊದಲ ಅಧ್ಯಯನ ಎಂದು ಪ್ರಶಂಸಿಸಿಸ್ದಾರೆ ಎಂದು ಡಾ. ಹೆಬ್ಬಾಳ್ ಅವರು ಕರ್ನಾಟಕ ಕಹಳೆ ಡಾಟ್ ಕಾಮ್’ ಗೆ ತಿಳಿಸಿದರು.
*****