ಅನುದಿನ‌ ಕವನ-೧೪೯೯, ಯುವ ಕವಿ: ತರುಣ್ ಎಂ✍️ ಆಂತರ್ಯ, ಚಿತ್ರದುರ್ಗ, ಕವನದ ಶೀರ್ಷಿಕೆ:ಪ್ರಕೃತಿಯೊಂದಿಗೆ ನಾ ತುಸು ಬೆರೆತಾಗ..

ಪ್ರಕೃತಿಯೊಂದಿಗೆ ನಾ ತುಸು ಬೆರೆತಾಗ..

ಮುಗಿಲಿನಲಿ ಮೋಡ ಮಳೆಯು
ಮಾಗಿ ಮೈ ಮರೆತು ಸರಸಕ್ಕಿಳಿದರೆ
ಇಳೆಯೊಂದು ಎದೆ ತೆರೆಯಿತು

ಕಡಲೊಂದು ಭೋರ್ಗರೆದು
ಅಲೆಯೊಂದಿಗೆ  ಅಲೆದಾಡುವಾಗ
ಯಾಕೊ ತೀರವು ಮೌನ

ಪರ್ವತದ ಒಡಲಿನಿಂದ
ಕಣ್ಣುಜ್ಜುತ ಸೂರ್ಯ ಉದಯಿಸಿದರೆ
ಮುಖ ಮುದುರಿಕೊಂಡ ಹೂವೊಂದು ನಕ್ಕಿತು

ಹಕ್ಕಿಗಳ ಹಿಂಡೊಂದು ಸೇರಿ
ಕಟ್ಟಿದ ಹಾಡೊಂದನು
ತಂಗಾಳಿ ಯಾಕೊ ಹರಿ ಬಿಟ್ಟಿತು

ಎಲ್ಲರ ಮಾತಿಗು ತಲೆ ದೂಗುವ ಸಂಜೆಗೆ
ವಾಪಾಸು ಬರುವಾಗ ಯಾರೊ ಗಿಲ್ಲಿ
ಕೆನ್ನೆಗಳು ಕೆಂಪಾಯಿತು

ರಾತ್ರಿ ಪೂರಾ ಮಿರಿ ಮಿರಿ
ಮಿಂಚುವ ತಾರೆಗಳ ಕೊಲೆಗೈದಿಹರೆಂದು
ಮುಂಜಾನೆ ಎದ್ದು ಹುಡುಕಿದರೆ
ತಣ್ಣನೆಯ ಮಂಜು ಸಿಕ್ಕಿತು ….


-ತರುಣ್ ಎಂ✍️ ಆಂತರ್ಯ, ಚಿತ್ರದುರ್ಗ
—–