ಕಾರಂತ ರತ್ನ ಪ್ರಶಸ್ತಿ ಪ್ರದಾನ: ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ -ಚೋರನೂರು ಟಿ ಕೊಟ್ರಪ್ಪ.

ಬಳ್ಳಾರಿ.ಏ.೯. ಮನುಷ್ಯನ ಸರ್ವಾಂಗ ಸುಂದರ ಬದುಕಿನ ನಿರ್ಮಾಣಕ್ಕೆ ಕಲೆ ಮತ್ತು ಸಂಸ್ಕೃತಿ ಪೂರಕವಾಗಿವೆ. ಕಲಾವಿದರು ಮತ್ತು ಕಲಾಭಿವೃದ್ಧಿ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಳವಾದಂತೆ ಕಲೆಯ ಬೆಳವಣಿಗೆ ತಾನಾಗಿಯೇ ಆಗುತ್ತದೆ. ಆದರೂ ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ ಎಂಬ ಮಾತು ಸತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಚೋರನೂರು ಟಿ ಕೊಟ್ರಪ್ಪ ಅವರು ಅಭಿಪ್ರಾಯ ಪಟ್ಟರು.
ನಗರದ ಶ್ರೀಮೇಧಾ ಪದವಿ ಮಹಾ ವಿದ್ಯಾಲಯಲ್ಲಿ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ (ರಿ), ಭೈರಗಾಮದಿನ್ನೆ ಹಮ್ಮಿಕೊಂಡ ಕಾರಂತ ರತ್ನ, ಕಾರಂತ ಸಾಹಿತ್ಯ ರತ್ನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ನಡುವೆ ಎಲೆಮರೆ ಕಾಯಿಯಂತೆ ಬದುಕುತ್ತಿರುವ ಅಪ್ರತಿಮ ಕಲಾವಿದರು ಇದ್ದಾರೆ. ಅವರನ್ನು ಗುರ್ತಿಸಿ ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ಈ ಸಂಸ್ಥೆ ನಿರತವಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ಮುಖ್ಯ ಅತಿಥಿ, ಹಿರಿಯ ರಂಗಕರ್ಮಿ ಕುಡುದರಹಾಳ್ ಡಾ.ಶಿವಕುಮಾರ ತಾತ ಮಾತಾನಾಡಿ ಮನುಷ್ಯ ಎಲ್ಲವನ್ನೂ ತಿಳಿಯುತ್ತಲೆ ತಿಳಿಯಾಗುತ್ತಾನೆ ಹಾಗಾಗಿ ಅವನ ಎಲ್ಲ ತಿಳುವಳಿಕೆಗೆ ರಂಗಭೂಮಿ ಅವಶ್ಯ ಎಂದರು.


ಲೇಖಕ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ರಚನೆಯ ‘ಯಪ್ಪ ತಿಪ್ಪನ ನುಡಿಗಳು’ ಪುಸ್ತಕ ಲೋಕಾರ್ಪಣೆ ಮಾಡಿದ ಸಾಹಿತಿ ವೀರೇಂದ್ರ ರಾವಿಹಾಳ್, ಪುಸ್ತಕ ಸಮಾಜ ಎಲ್ಲ ವರ್ಗಗಳ ಚಲನವಲನಗಳ ಪ್ರತಿಫಲಕದಂತಿದ್ದು, ಸಹೃದಯಿಗಳನ್ನು ಆಕರ್ಷಿಸುತ್ತದೆ ಎಂದರು.
ಪ್ರಶಸ್ತಿ ಪ್ರದಾನ: ಮರಿಯಮ್ಮಮಹಳ್ಳಿ ಈ.ವೆಂಕಟೇಶ ಅವರ ಮಹಾಶಕ್ತಿ, ಯಾದಗಿರಿ ಅನಂತಕುಮಾರರ ರುಧಿರಶ್ರು, ಕಾರ್ಕಳ ಸಾವಿತ್ರಿ ಮನೋಹರ ಅವರ ಪಂಚ ಪ್ರಹಸನ, ಧಾರವಾಡ ಡಾ.ವೀಣಾ ಸಂಕನಗೌಡರ ಮೂರು ಮತ್ತೊಂದು ನಾಟಕಗಳು, ಶಿವಮೊಗ್ಗ ಡಾ.ಗಣೇಶ ಕೆಂಚನಾಲ ರ ಉಡು-ತಡಿ ಪುಸ್ತಕಗಳಿಗೆ ರಾಜ್ಯ ಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ ಬಯಲಾಟ ಕಲಾವಿದೆ ಎಳ್ಳಾರ್ತಿ ಚಾಮುಂಡೇಶ್ವರಿ, ಬಯಲಾಟ ನೇಪಥ್ಯಗಾರ ಎಮ್ಮಿಗನೂರು ಜೀರ್ ಹಾಲೇಶಪ್ಪ, ಹಿರಿಯ ಕಲಾವಿದೆ ಕೊಟ್ನೆಕಲ್ ರಂಗಮ್ಮ, ಬಯಲಾಟ ಹಾರ್ಮೋನಿಯಂ ಮೇಷ್ಟ್ರು ಮೆಟ್ರಿ ಸಿ.ಡಿ.ಪಿ‌.ಮಾರೆಪ್ಪ, ಬಯಲಾಟದ ಹಿರಿಯ ಕಲಾವಿದ ತಾಳೂರಿನ ಬಂಡ್ರಿ ಲಿಂಗಪ್ಪ ರವರಿಗೆ ಕಾರಂತ ರತ್ನ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ರಾಮಕಿರಣ್, ಸಾಹಿತಿಗಳಾದ ಡಾ.ದಸ್ತಗೀರ್ ಸಾಬ್ ದಿನ್ನಿ, ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಮುದ್ದಟನೂರು ಹೆಚ್ ತಿಪ್ಪೇಸ್ವಾಮಿ ಹಾಗೂ ಕಾರ್ಯದರ್ಶಿ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ಇದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ವೈ.ಸುಮ ನಿರೂಪಿಸಿದರು.