ಅನುದಿನ ಕವನ:೩೬೦, ಕವಿ: ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಯಾದಗಿರಿ, ಕವನದ ಶೀರ್ಷಿಕೆ: ಬದುಕಿನ‌ ದಾರಿ

ಬದುಕಿನ ದಾರಿ

ಬದುಕಿನ ದಾರಿ ಕ್ರಮಿಸಿದಷ್ಟು ದೂರ
ನೋವು ಕಳೆಯುವುದು ಸಂಸಾರದ ಸಾರ
ಮನಸು ತಡೆಯಲಾರದು ನೋವಿನ ಭಾರ.

ಹಿಡಿದರೆ ಬಿಡಿಸಬಹುದು ಗರ
ಹಸಿವು ತಡೆಯಲಾರದು ಅನ್ನದ ಬರ
ಹೊಟ್ಟೆ ಹಸಿದರೂ ಇರಬೇಕು ನ್ಯಾಯದ ಪರ.

ಭಕ್ತಿಯಿಂದ ಮುಗಿದರೆ ಕರ
ದೇವರು ಕೊಡುವನು ಬೇಡಿದ ವರ
ಬದುಕು ಹಸನಾಗುವುದು ನೋಡು ನರ.

ಹಿಡಿದರೆ ಧನ ಕನಕದ ಗರ
ಬದುಕಿನ ತುಂಬ ಜ್ಞಾನದ ಬರ
ಮನಸು ನಿಲ್ಲುವುದಿಲ್ಲ ಧರ್ಮದ ಪರ.

ತಂಪಿಗೆ ಹೆಸರು ಬೇವಿನ ಮರ
ಬರಿದಾಗಬಾರದು ಬದುಕಿನ ಸಾರ
ದಿನ ಕಳೆದರೆ ಬಾಡುವುದು ಹೂವಿನ ಹಾರ.

ಅರಿತು ನಡೆದರೆ ಒಳಿತು ನರ
ದವಸಧಾನ್ಯ ಕೇರಲು ಬೇಕು ಮೊರ
ಮನಸಿದ್ದರೆ ಸಾಕು ಮನುಷ್ಯ ಧರ್ಮದ ಪರ.

ಹೃದಯ ಗೆದ್ದ ಸರದಾರ
ಮುಡಿಗೇರಿಸುವನು ಪ್ರೀತಿಯ ಹಾರ
ನೆಮ್ಮದಯಿಂದ ಸಾಗಿಸುವನು ಸಂಸಾರ.

ಕೈಯಲ್ಲಿದ್ದರು ಮುತ್ತಿನ ಸರ
ಭಕ್ತಿಗೆ ಭಗವಂತ ಕೊಡುವನು ವರ
ದಿನನಿತ್ಯ ಬಿಡದೆ ಕಾಯುವರು ಹರಿ ಹರ

-ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ. ಜಿಲ್ಲಾಧ್ಯಕ್ಷರು: ಸಿರಿಗನ್ನಡ ವೇದಿಕೆ, ಯಾದಗಿರಿ ಜಿಲ್ಲಾ ಘಟಕ, ಯಾದಗಿರಿ
*****