ವಿಶ್ವ ಜಲದಿನದ ಪ್ರಯುಕ್ತ ಕವನ….👇
ನೀರು ಉಳಿಸಿ
ಕೆರೆಯ ಕಟ್ಟಿಸು ಬಾವಿ ತೋಡಿಸು
ಎನ್ನುತಿದ್ದರು ಪೂರ್ವದಿ|
ಜಲದ ಮೌಲ್ಯವ ತಿಳಿದುಕೊಂಡಿಹ
ಜನರಿಹರೆ ಈಕಾಲದಿ||
ಒಂದು ಹನಿಹನಿ ನೀರು ಸಿಗುವುದು
ಕಷ್ಟವಿರುವುದು ಇಂದಿಗೆ|
ಪೋಲು ಮಾಡದೆ ಮಿತದ ಬಳಕೆಯು
ಇರಲುಬೇಕಿದೆ ಒಳಿತಿಗೆ||
ಹೊಸತು ಸೃಷ್ಟಿಯ ಮಾಡಲಾರನು
ನೀರನೆಂದಿಗು ಮನುಜನು|
ಇರುವ ನೀರನು ಬಳಕೆ ಮಾಡುತ
ಕಾಯಬೇಕಿದೆ ಹಿತವನು||
ಜಲವನುಳಿಸುತ ಜೀವ ಪೊರೆಯುವ
ಕಾರ್ಯ ಮಾಡಲು ಒಳಿತಿದೆ|
ನಿರುತ ಎಚ್ಚರ ಗುಣವ ತೋರುತ
ನೀರು ಉಳಿಸಲು ಸುಖವಿದೆ||
ಭೂಮಿ ಮೇಲ್ಗಡೆ ಕಡಲು ಇದ್ದರು
ಕುಡಿಯಲಾಗದು ನೀರನು|
ಕುಡಿವ ಜಲವನು ಹಾಳು ಮಾಡದೆ
ನೀಗಬಹುದಿದೆ ತೃಷೆಯನು||
-ಅಶ್ವತ್ಥನಾರಾಯಣ, ಮೈಸೂರು
*****