ಅನುದಿನ ಕವನ-೪೯೧, ಕವಿ: ಎ.ಎನ್.ರಮೇಶ್. ಗುಬ್ಬಿ, ಕವನದ ಶೀರ್ಷಿಕೆ: ದೀಪ್ತಿ

” ಪ್ರೇಮದ ಮಧುರ ಸಂವೇದನೆಗಳ ಕವಿತೆ. ಒಲವ ಸುಂದರ ಹೊಂಬೆಳಕಿನ ಭಾವಪ್ರಣತೆ ಹೃನ್ಮನಗಳ ಪುಳಕಿಸುವ ಪ್ರೀತಿ, ಪ್ರತಿ ಹೆಜ್ಜೆಗೂ ಸ್ಫೂರ್ತಿಯಷ್ಟೇ ಅಲ್ಲ, ನಡೆವ ಹಾದಿ ಬೆಳಗುವ ಚಿರಂತನ ದೀಪ್ತಿ. ಮುದಗೊಳಿಸುವ ಸಾಲುಗಳ ಅಭಿವ್ಯಕ್ತಿಗೆ ಒಪ್ಪುವ ಮೋಹಕ ಚಿತ್ರ. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇

ದೀಪ್ತಿ..!

ನೂರು ತಲ್ಲಣಗಳ ನಡುವೆ
ನಿನ್ನದೊಂದು ರಿಂಗಣ ಸಾಕು
ಜೀವ ಝೇಂಕರಿಸಲು.!

ನೂರು ಯಾತನೆಗಳ ನಡುವೆ
ನಿನ್ನದೊಂದು ಯೋಚನೆ ಸಾಕು
ಭಾವ ನವೀಕರಿಸಲು.!

ನೂರು ಜಂಜಡಗಳ ನಡುವೆ
ನಿನ್ನದೊಂದು ಸಂಗಡ ಸಾಕು
ಗೆಲುವ ಸಮೀಕರಿಸಲು.!

ನೂರು ಕೀರ್ತನೆಗಳ ನಡುವೆ
ನಿನ್ನದೊಂದು ಪ್ರಾರ್ಥನೆ ಸಾಕು
ಬೆಳಕ ಸಾಕ್ಷಾತ್ಕರಿಸಲು.!


-ಎ.ಎನ್.ರಮೇಶ್. ಗುಬ್ಬಿ.
*****